ಔಂಧ ನಾಗನಾಥ್ ಇದು ಮಹಾರಾಷ್ಟ್ರ ರಾಜ್ಯದ ಮರಾಠವಾಡ ಪ್ರದೇಶದ ಅಡಿಯಲ್ಲಿ ಬರುವ ಹಿಂಗೋಲಿ ಜಿಲ್ಲೆಯಲ್ಲಿ ಇರುವ ಒಂದು ಸುಂದರ ಪುಟ್ಟ ಪಟ್ಟಣ.
ಮೊದಲನೇ ಜ್ಯೋತಿರ್ಲಿಂಗ
ಔಂಧ ನಾಗನಾಥದಲ್ಲಿರುವ ಲಿಂಗವು, ಭಾರತದಲ್ಲಿರುವ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವುದಲ್ಲದೆ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ಜ್ಯೋತಿರ್ಲಿಂಗವೂ ಆಗಿದೆ. ಹಾಗೆಯೆ ಇದು ಮಹಾರಾಷ್ಟ್ರದಲ್ಲಿರುವ ಐದು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಪುರಾಣಗಳ ಪ್ರಕಾರ, ಪಾಂಡವರನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಅಟ್ಟಿದಾಗ ಅವರಲ್ಲಿ ಹಿರಿಯವನಾದ ಯುದಿಷ್ಟರ ಇದನ್ನು ಸ್ಥಾಪಿಸಿ ಶಿವನಿಗೆ ಅರ್ಪಿಸಿದ. ಔಂಧ ನಾಗನಾಥ್ ದೇವಾಲಯವನ್ನು ಶಿವನ ಆರಾಧನೆಗಾಗಿ ಹೇಮದ್ಪಂಥಿ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯವು ಸುಮಾರು 60000 ಅಡಿಗಳಷ್ಟು ವಿಸ್ತಾರವಾಗಿದೆ. ಇಲ್ಲಿ ಗಮನಿಸಬೇಕಾದ ವೈಶಿಷ್ಠ್ಯವೆಂದರೆ ನಂದಿಯನ್ನು ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸದೆ ಹಿಂಭಾಗದಲ್ಲಿ ಸ್ಥಾಪಿಸಿರುವುದು. ದೇವಾಲಯದ ಸುತ್ತಮುತ್ತ ಉಳಿದ ಜ್ಯೋತಿರ್ಲಿಂಗಗಳನ್ನು ಚಿತ್ರಿಸಿರುವ ಬಹಳಷ್ಟು ಸಣ್ಣ ದೇವಾಲಯಗಳಿವೆ. ದತ್ತಾತ್ರೇಯ, ನೀಲಕಂಠೇಶ್ವರ, ದಶಾವತಾರ, ವೇದವ್ಯಾಸಲಿಂಗ ಮತ್ತು ಗಣಪತಿ ಮುಂತಾದ ದೇವತೆಗಳ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು.
ಧಾರ್ಮಿಕ ತಾಣ
ಔಂಧವನ್ನು ವರ್ಷದ ಯಾವುದೆ ಸಮಯದಲ್ಲಾದರೂ ಸಂದರ್ಶಿಸಬಹುದು. ಆದರೆ ಇಲ್ಲಿನ ಬೇಸಿಗೆ ಮಾತ್ರ ಕೊಂಚ ಅಸಹನೀಯ. ಇದು ಹಿಂಗೋಲಿಗೆ ಹತ್ತಿರವಿರುವುದರಿಂದ ಇದು ಎಲ್ಲ ಸುತ್ತಮುತ್ತಲಿನ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ ಹಾಗು ಇಲ್ಲಿಗೆ ಸುಲಭವಾಗಿ ತಲುಪಬಹುದು. ನೀವು ಹಿಂಗೋಲಿಗೆ ಭೇಟಿ ಕೊಡುತ್ತಿರುವ ಪ್ರವಾಸಿಗರಾದರೆ, ನೀವು ಭೇಟಿ ಕೊಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಔಂಧ ನಾಗನಾಥ್ ಗೆ ಪ್ರಥಮ ಸ್ಥಾನವಿರಲಿ.
ಈ ಪುಣ್ಯಕ್ಷೇತ್ರ ನಿಮ್ಮಲ್ಲಿ ನಂಬಿಕೆ ಹಾಗು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿ ನಿಮ್ಮನ್ನು ಯುಗಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.