ಅಮರಾವತಿಯಲ್ಲಿರುವ ಕೃಷ್ಣ ನದಿದಂಡೆ, ಹೆಸರೇ ಸೂಚಿಸುವಂತೆ ದಿವ್ಯ ಜಲರಾಶಿಯನ್ನೇ ಹೊಂದಿದೆ. ಕೃಷ್ಣ ನದಿ ದಂಡೆಯ ಮೇಲೆ ಅಮರಾವತಿ ನೆಲೆ ನಿಂತಿರುವುದರಿಂದ ಈ ನಗರದ ಜನತೆಗೆ ಕೃಷ್ಣ ನದಿ ಹತ್ತಾರು ಪ್ರಾಮುಖ್ಯತೆಗಳನ್ನು ಹಿಡಿದಿಟ್ಟುಕೊಂಡಿದೆ. ಪ್ರಮುಖ ಮಾನವ ನಾಗರೀಕತೆಗಳೆಲ್ಲ ಹುಟ್ಟಿ ಬೆಳೆದು ನಿಂತಿದ್ದು ನದಿ ದಂಡೆಯ ಮೇಲೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದೇ. ಹೀಗಾಗಿ ಬದುಕು ಮತ್ತು ನೀರಿನ ಮಹತ್ವವನ್ನು, ಸಂಬಂಧವನ್ನು ಅಲ್ಲಗಳೆಯುವಂತಿಲ್ಲ.
ಕ್ರಿಸ್ತ ಪೂರ್ವ ಕಾಲದಲ್ಲಿಯೇ ಅಮರಾವತಿಯಲ್ಲಿ ನಾಗರಿಕತೆ ಬೆಳೆದು ನಿಂತಿತ್ತು. ಇಂಥ ನೂರಾರು ಸಂಗತಿಗಳಿಂದಾಗಿಯೇ ಅಮರಾವತಿಯಲ್ಲಿ ಜೀವನ ಬೆಳಗುವುದಕ್ಕೆ ಕೃಷ್ಣ ನದಿ ಮಹತ್ವದ ಪಾತ್ರ ವಹಿಸಿದೆ. ಕಾಲ ಸರಿದ ಹಾಗೆ ನದಿಯ ಮೌಲ್ಯ ಇಂದಿಗೂ ಕೊಂಚವೂ ಕಡಿಮೆಯಾಗಿಲ್ಲ. ಹೀಗಾಗಿ ಕೃಷ್ಣ ನದಿ ಅಮರಾವತಿಯ ಪಾಲಿಗೆ ಮೌಲ್ಯಯುತ ಸಂಪತ್ತಾಗಿದ್ದು ನೂರಾರು ಪ್ರವಾಸಿಗರನ್ನು ಪ್ರತಿವರ್ಷ ಸೆಳೆಯುತ್ತದೆ.