ಅಲಹಾಬಾದ್ ಕೋಟೆಯ ಪಾತಾಳಪುರಿ ಮಂದಿರದ ಬಳಿಯಿರುವ ಅಕ್ಷಯ್ ವಟ್ ಮರವನ್ನು 'ಅವಿನಾಶಿನಿ ಆಲದ ಮರ' ಎಂದೂ ಕರೆಯುತ್ತಾರೆ. ಪುರಾಣದ ಪ್ರಕಾರ, ಒಮ್ಮೆ ಒಬ್ಬ ಋಷಿ ಮುನಿಯು ಭಗವಾನ್ ನಾರಾಯಣನನ್ನು ತನ್ನ ಅಗಾಧವಾದ ದೈವಿಕ ಶಕ್ತಿಯನ್ನು ತೋರಿಸಲು ಕೇಳಿದಾಗ, ಸ್ವಯಂ ನಾರಾಯಣನು ಒಂದು ಕ್ಷಣಕಾಲ ಮಾತ್ರ ಇಡೀ ವಿಶ್ವವನ್ನು ಜಲಾವೃತ ಮಾಡಿ ಕ್ಷಣಾರ್ಧದಲ್ಲಿ ಅದೃಶ್ಯನಾದ. ಆ ಕ್ಷಣದ ಪ್ರವಾಹದಲ್ಲಿ ಎಲ್ಲವೂ ಜಲಾವೃತವಾಗಿದ್ದರೂ ಅಕ್ಷಯ್ ವಟ್ ಮಾತ್ರ ತಲೆಯೆತ್ತಿ ನಿಂತಿತ್ತಂತೆ. ಆದ್ದರಿಂದ ಅಂದಿನಿಂದ ಈ ಮರವನ್ನು ಅಜರಾಮರ ಎಂದೇ ಪರಿಗಣಿಸಲಾಗಿದೆ.
ಇದು ಭಾರತದ ಸೇನೆಯ ವಶದಲ್ಲಿ ಇರುವುದರಿಂದ ಸೇನೆ ಅಧಿಕಾರಿಗಳ ವಿಶೇಷ ಅನುಮತಿ ಪಡೆದು ಅಕ್ಷಯ್ ವಟ್ ಸಂದರ್ಶಿಸಬಹುದು. ಆದರೆ, ಕುಂಭ ಮೇಳದ ಸಂದರ್ಭದಲ್ಲಿ ಎಲ್ಲ ಯಾತ್ರಾರ್ಥಿಗಳಿಗೆ ಈ ಪವಿತ್ರ ಸ್ಥಳ ತೆರವುಗೊಳಿಸಲಾಗಿರುತ್ತದೆ.