ಆನಂದಾನಂದ ಸ್ವಾಮಿಯವರ ಮುಂದಾಳತ್ವದಲ್ಲಿ ಬ್ರಿಟೀಷರ ಕಾಲದಲ್ಲಿ ಅಂದರೆ 1822ರಲ್ಲಿ ನಿರ್ಮಾಣಗೊಂಡ ಸ್ವಾಮಿ ನಾರಾಯಣ ದೇವಾಲಯವು ಒಂದು ಅದ್ಭುತವಾದ ದೇವಾಲಯವಾಗಿದೆ. ಸ್ವಾಮಿ ನಾರಾಯಣ ಪಂಥದವರಿಗೆ ಸೇರಿದ ಇದನ್ನು ಬರ್ಮಾ ತೇಗದ ಮರಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರಲ್ಲಿನ ಸುಂದರವಾದ ಕೆತ್ತನೆಗಳು ಹಾಗು ಅದರಲ್ಲಿ ಮೂಡಿಸಿರುವ ಪವಿತ್ರ ಗ್ರಂಥಗಳ ಸಾಲುಗಳು ಪ್ರವಾಸಿಗರಿಗೆ ಆಧ್ಯಾತ್ಮಿಕತೆಯ ಚೇತೋಹಾರಿತನವನ್ನು ದಯಪಾಲಿಸುತ್ತವೆ.
ಸ್ವಾಮಿ ನಾರಾಯಣ ದೇವಾಲಯದಲ್ಲಿ ಹಲವಾರು ವಿಗ್ರಹಗಳು ಇವೆ. ಈ ದೇವಾಲಯದಲ್ಲಿ ಸ್ವತಃ ಸ್ವಾಮಿ ನಾರಾಯಣರ ವಿಗ್ರಹ ಮತ್ತು ಅವರಿಗೆ ಸೇರಿದ ಉಳಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರ ಜೊತೆಗೆ ವಿವಿಧ ಧರ್ಮಗಳಿಗೆ ಸೇರಿದ ಮಹಾಮಹೀಮರ ವಿಗ್ರಹಗಳನ್ನು ಮತ್ತು ಅವರ ಬೋಧನೆಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಇವಿಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಮಹಿಳಾ ಭಕ್ತರಿಗಾಗಿ ಪ್ರತ್ಯೇಕವಾದ ವಿಭಾಗವನ್ನು ಸಹ ಇಡಲಾಗಿದೆ. ಪ್ರವಚನ ಮತ್ತು ಉತ್ಸವಗಳ ಸಮಯದಲ್ಲಿ ಈ ವಿಭಾಗದಲ್ಲಿ ಮಹಿಳೆಯರಿಗೆ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ಈ ದೇವಾಲಯವು ತನ್ನ ವರ್ಣರಂಜಿತವಾದ ರಚನೆಯಿಂದ ಗಮನ ಸೆಳೆಯುತ್ತದೆ. ಇದರ ಹಿನ್ನಲೆಯಲ್ಲಿ ಬಣ್ಣರಹಿತವಾದ ಹಳೆಯ ಅಹಮದಾಬಾದ್ ಎದ್ದು ಕಾಣುತ್ತದೆ. ನರ ನಾರಾಯಣ ಇಲ್ಲಿನ ಪ್ರಮುಖ ದೇವರಾಗಿದ್ದಾರೆ.