ಗಾಂಧೀ ಆಶ್ರಮವು ಸಾಬರಮತಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಅದಕ್ಕಾಗಿ ಇದನ್ನು ಸಾಬರಮತಿ ಆಶ್ರಮ ಎಂದು ಸಹ ಕರೆಯುತ್ತಾರೆ. ಇದನ್ನು ಗಾಂಧೀಜಿಯವರು 1917ರಲ್ಲಿ ಸ್ಥಾಪಿಸಿದರು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ಗುರುತಿಸಿಕೊಂಡಿರುವ ದಂಡಿ ಸತ್ಯಾಗ್ರಹವು ಆರಂಭಗೊಂಡಿದ್ದು ಇದೇ ಆಶ್ರಮದಲ್ಲಿ ಹಾಗಾಗಿ ಇದು ಇತಿಹಾಸದ ದೃಷ್ಟಿಯಿಂದ ಸಹ ಖ್ಯಾತಿಯನ್ನು ಪಡೆದಿದೆ. ಗಾಂಧೀಜಿಯವರಿಗೆ ಸಂಬಂಧಿಸಿದ ಜೀವನಗಾಥೆಗಳಿಗೆ ಮತ್ತು ಅವರ ಸತ್ಯಾಗ್ರಹಗಳ ರೂಪುರೇಷೆಗೆ ಈ ಆಶ್ರಮವು ಸಾಕ್ಷಿಯಾಗಿದೆ.
ಸ್ವಾವಲಂಬಿಯಾಗಿ ಬಾಳಬೇಕು ಎಂಬ ಗಾಂಧೀಜಿಯವರ ತತ್ವಕ್ಕೆ ಈ ಆಶ್ರಮವು ಅಪೂರ್ವ ಕೊಡುಗೆಯನ್ನು ನೀಡಿದೆ. ಗಾಂಧೀಜಿ ಇಲ್ಲಿ ಹಲವಾರು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಇದೇ ಆಶ್ರಮದಲ್ಲಿ ಗಾಂಧೀಜಿ ಖಾದಿಯನ್ನು ನೇಯುತ್ತಿದ್ದರು. ಪೂರ್ವಭಾವಿಯಾಗಿ ಸಂದರ್ಶನವನ್ನು ನಿಗದಿಗೊಳಿಸಿದರೆ ಇಲ್ಲಿ ಮಾರ್ಗದರ್ಶಿಯ್ಗಳನ್ನು ಒದಗಿಸಲಾಗುತ್ತದೆ. ಇವರು ಈ ಆಶ್ರಮದ ಬಗ್ಗೆ ಸವಿವರಣೆಯನ್ನು ಒದಗಿಸುತ್ತಾರೆ.
ಸಾಬರಮತಿಯಲ್ಲಿ ಮಗನ್ ನಿವಾಸ್, ಉಪಾಸನಾ ಮಂದಿರ್, ಹೃದಯ್ ಕುಂಜ್ , ವಿನೋಬಾ -ಮೀರಾ ಕುಟೀರ್, ನಂದಿನಿ, ಉದ್ಯೋಗ್ ಮಂದಿರ್, ಸೋಮನಾಥ್ ಛಾತ್ರಾಲಯ, ಶಿಕ್ಷಕರ ನಿವಾಸ್, ಗಾಂಧೀ ಸ್ಮಾರಕ್ ಸಂಗ್ರಹಾಲಯ, ವರ್ಣಚಿತ್ರಗಳ ಗ್ಯಾಲರಿ, ಮೈ ಲೈಫ್ ಇಸ್ ಮೈ ಮೆಸೆಜ್, ಗ್ರಂಥಾಲಯ ಮತ್ತು ಪ್ರಕಾಶನ, ಗಾಂಧೀ ಸ್ಮಾರಕ್ ಸಂಗ್ರಹಾಲಯವು ಒಂದು ಸಣ್ಣ ವಸ್ತು ಸಂಗ್ರಹಾಲಯವಾಗಿದ್ದು, ಗಾಂಧೀಜಿಯವರಿಗೆ ಸೇರಿದ ಪತ್ರಗಳು ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಗಾಂಧೀಜಿಯವರ ಹಸ್ತ ಪ್ರತಿಗಳನ್ನು, ಪಾರಿತೋಷಕಗಳನ್ನು, ಅವರ ಛಾಯಾಚಿತ್ರಗಳ ನೆಗೆಟಿವ್ಗಳನ್ನು, ಕಡತಗಳನ್ನು ಸಹ ಇಡಲಾಗಿದೆ.
ಹೃದಯ್ ಕುಂಜ್ ಎಂಬುದು ಗಾಂಧೀಜಿ ಮತ್ತು ಕಸ್ತೂರ್ ಬಾರವರ ವಸತಿ ನಿಲಯವಾಗಿತ್ತು. ವಿನೋಬಾ- ಮೀರಾ ಕುಟೀರದಲ್ಲಿ ಆಚಾರ್ಯ ವಿನೋಬಾ ಭಾವೆ ಮತ್ತು ಮೀರಾ ಬೆನ್ರವರು ವಿವಿಧ ಕಾಲ ಘಟ್ಟದಲ್ಲಿ ವಾಸಿಸಿದ್ದರು. ಉಪಾಸನಾ ಮಂದಿರ್ ಎಂಬುದು ಆಶ್ರಮದ ಜನಗಳ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿರುವ ಎಲ್ಲಾ ಕಟ್ಟಡಗಳು ಮತ್ತು ಅಂಶಗಳು ಗಾಂಧೀಜಿಯವರ ಜೀವನಕ್ಕೆ ಸಂಬಂಧಿಸಿದವುಗಳಾಗಿವೆ ಮತ್ತು ಹಾಗಗಿಯೇ ಪ್ರಸಿದ್ಧಿಯನ್ನು ಪಡೆದಿವೆ.